ನಮ್ಮ ಮೈಸೂರೂ ಒಂದು ಶಕ್ತಿ ಪೀಠ ಗೊತ್ತಾ?
ಸತಿ ದೇವಿಯು ಚಾಮುಂಡೇಶ್ವರಿ ಆಗಿದ್ದು ಹೇಗೆ?
Image Credits : Religionworld.in
ಕರ್ನಾಟಕದ ಸಾಂಸಕೃತಿಕ ರಾಜಧಾನಿ ಮೈಸೂರಿನಲ್ಲಿರುವ ಶ್ರೀ ಚಾಮುಂಡೇಶ್ವರಿ ಶ್ರೀ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಇದೊಂದು ಮಹಾ ಶಕ್ತಿ ಪೀಠ. ಅಷ್ಟದಶ ಶಕ್ತಿ ಪೀಠಗಳ ಪೈಕಿ ನಾಲ್ಕನೇಯದ್ದು.
ದಕ್ಷ ಯಜ್ಞದಿಂದ ಸತಿಯನ್ನು ಕಳೆದುಕೊಂಡ ಶಿವನು, ಆಕೆಯ ದೇಹವನ್ನು ಹೊತ್ತು ತಾಂಢವವಾಡುವಾಗ ಲೋಕದ ಹಿತಕ್ಕಾಗಿ ವಿಷ್ಣುವು ಸುದರ್ಶನ ಚಕ್ರ ಪ್ರಯೋಗಿಸಿ ಸತಿಯ ದೇಹವನ್ನು ತುಂಡರಿಸಿದಾಗ, ಸತಿಯ ಕೂದಲು ಬಿದ್ದಿದ್ದು ಕರ್ನಾಟಕದ ಮೈಸೂರಿನಲ್ಲಿರುವ ಬೆಟ್ಟದ ಮೇಲೆ.
ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ
ಇಲ್ಲಿ ಚಾಮುಂಡೇಶ್ವರಿ ಮಹಿಷಾಸುರ ಮರ್ದಿನಿ ದುರ್ಗಾದೇವಿಯ ರೌದ್ರಾವತಾರದಲ್ಲಿ ವಿರಾಜಮಾನವಾಗಿರುವ ವಿಗ್ರಹ ಇದೆ. ಮಹಿಷಾಸುರ ಎಂಬ ರಾಕ್ಷಸ ಇಲ್ಲಿನ ಪ್ರದೇಶವನ್ನು ಆಳುತ್ತಿದ್ದನು. ಎಮ್ಮೆಯ ಮುಖದ ಆ ಅಸುರನ ಉಪಟಳ ಸಹಿಸಲು ಅಸಾಧ್ಯವಾದಾಗ ದೇವತೆಗಳೆಲ್ಲಾ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಮೊರೆ ಹೋಗುತ್ತಾರೆ.
Image Credits : Astroyard
ನಂತರ ದೇವತೆಗಳು ತಮ್ಮ ಶಕ್ತಿಯನ್ನು ಒಟ್ಟುಗೂಡಿಸಿ ಚಾಮುಂಡನ ಅವತಾರ ತಾಳುತ್ತಾರೆ. ಚಾಮುಂಡ ಉಗ್ರ ಸ್ವರೂಪವನ್ನು ತಾಳಿ ರಾಕ್ಷಸನನ್ನು ಸಂಹಾರ ಮಾಡುತ್ತಾಳೆ. ದುಷ ್ಟಶಕ್ತಿಯ ಸಂಹಾರವಾದ ಪ್ರತೀಕವಾಗಿ ನವರಾತ್ರಿ ಹಬ್ಬವನ್ನು ಆಚರಿಸಲಾಗುವುದು.
ಮಹಿಷಮರ್ದಿನಿ, ಚಂಡ ಮತ್ತು ಮುಂಡ
ಮಾರ್ಕಂಡೇಯ ಪುರಾಣದ ಪ್ರಕಾರ, ದುರ್ಗೆಯು ಚಂಡ ಮತ್ತು ಮುಂಡರ ವಿರುದ್ಧ ಯುದ್ಧ ಮಾಡುವಾಗ, ಕೋಪೋಕ್ತಳಾಗಿ ಭಯಾನಕ ಕಾಳಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ಇಬ್ಬರು ಶತ್ರುಗಳ ತಲೆ ಕಡಿಯುತ್ತಾಳೆ. ಕಾಳಿಯ ಈ ಪರಾಕ್ರಮ ಅವಳಿಗೆ ಚಾಮುಂಡಿ ಎಂಬ ಹೆಸರನ್ನು ತಂದಿತು ಎನ್ನಲಾಗಿದೆ.
ರಕ್ತಬೀಜಾಸುರನನ್ನು ಸಂಹರಿಸಿದ ದೇವಿ
ಅಸುರ ರಕ್ತಬೀಜ ತನ್ನ ಒಂದೇ ಒಂದು ಹನಿ ರಕ್ತವು ನೆಲಕ್ಕೆ ಬಿದ್ದರೆ ಅವರಿಂದ ಅಸಂಖ್ಯಾತ ಅಸುರರನ್ನು ಹುಟ್ಟಿಸುವ ಶಕ್ತಿ ಹೊಂದಿದ್ದನು. ಇವನನ್ನು ಕೊಲ್ಲಲು ಕಾಳಿ ದೇವಿಯನ್ನು ಕರೆಯಿಸಲಾಯಿತು. ದೇವಿ ಮಹಾತ್ಮೆಯ ಪ್ರಕಾರ, ಚಾಮುಂಡಿಯು ರಕ್ತಬೀಜನಿಂದ ಹೊರಬಂದ ಎಲ್ಲ ರಕ್ತವನ್ನು ತನ್ನ ದೊಡ್ಡ ನಾಲಿಗೆಯಿಂದ ಹೀರಿದಳು. ತನ್ನ ಬಾಯಿಯನ್ನು ಪಾತಾಳ ಮುಟ್ಟುವಂತೆ ಅಗಲವಾಗಿ ತೆರೆದು ರಕ್ತಬೀಜ ಮತ್ತು ಅವನಿಂದ ಉತ್ಪತ್ತಿಯಾದ ಅಸುರನನ್ನು ತನ್ನ ಬಾಯಿಯಲ್ಲಿ ಹಾಕಿಕೊಂಡಳು.
ದಂತಕಥೆಗಳ ಪ್ರಕಾರ, ಉಜ್ಜಯನಿ ರಾಜನಾದ ಬಿಜ್ಜಲರಾಯನಿಗೆ ಏಳು ಹೆಣ್ಣು ಮಕ್ಕಳಿದ್ದು ಅವರಲ್ಲಿ ಚಾಮುಂಡಿ ಒಬ್ಬಳು. ಈ ಅಕ್ಕ ತಂಗಿಯರು ಯಾವುದೋ ಕಾರಣಕ್ಕಾಗಿ ತಮ್ಮಲ್ಲಿಯೇ ಜಗಳಾಡಿ ಉತ್ತರದ ಕಡೆ ಹೊದರು. ಆವಾಗ ಚಾಮುಂಡಿಯು ಮಹಿಷಾ ಮಂಡಳ ಎಂಬ ಸಮೃದ್ಧ ರಾಜ್ಯದಲ್ಲಿ ನೆಲೆಯೂರಲು ನಿರ್ಧರಿಸಿದಳು.
ತನ್ನ ತಂಗಿ ಉರಿಕಾಂತಿಯ ಸಹಾಯದಿಂದ, ಚಾಮುಂಡಿ ಮಹಿಷನನನ್ನು ವಧಿಸಿ, `ಮಹಿಷಮರ್ದಿನಿ' ಎಂದು ಪ್ರಸಿದ್ಧಳಾದಳು. ಈ ದಂತಕಥೆಯು ಬಹುಶ ಚಾಮುಂಡೇಶ್ವರಿ ಅಧಿದೇವತೆಯಾಗಲು ಕಾರಣವಾಯಿತು. ಬೆಟ್ಟದ ಕೆಳಗೆ ಉತ್ತನಹಳ್ಳಿಯಲ್ಲಿ ಜ್ವಾಲಾಮುಖಿ ಶ್ರೀ ತ್ರಿಪುರಾಸುಂದರಿ ದೇಗುಲವಿದೆ. ಭಕ್ತರು ಈ ದೇಗುಲಕ್ಕೆ ಮೊದಲು ಭೇಟಿ ನೀಡಿ ಆನಂತರ ಚಾಮುಂಡಿಯ ದರ್ಶನ ಪಡೆಯುತ್ತಾರೆ.
ಇಲ್ಲಿರುವ ದೇವಿಯ ವಿಗ್ರಹವನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಪುರಾಣ ಹೇಳುತ್ತದೆ. ೧೮೨೭ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪುರಾತನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಮಹಾದ್ವಾರದ ಮೇಲೆ ದೊಡ್ಡ ಗೋಪುರವನ್ನು ಕಟ್ಟಿಸಿ,`ಸಿಂಹ ವಾಹನ'ವನ್ನು ಕೊಡುಗೆಯಾಗಿ ನೀಡುತ್ತಾರೆ.
Image Credit : metrosaga.com
ರಥೋತ್ಸವ ಸಂದರ್ಭದಲ್ಲಿ ಈ ಸಿಂಹ ವಾಹನದಲ್ಲಿ ನಾಡ ದೇವತೆಯನ್ನು ಕೂರಿಸಿ ಮೆರವಣಿಗೆ ಮಾಡಲಾಗುವುದು. ಈ ದೇವಾಲಯಕ್ಕೆ ರಾಜ್ಯ-ಹೊರ ರಾಜ್ಯದ ಭಕ್ತರಲ್ಲದೆ ವಿದೇಶಿಯರು ಭೇಟಿ ನೀಡುತ್ತಾರೆ.
ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಧಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ, ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.
ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಮಹಿಷಾಸುರ ಮರ್ಧಿನಿಯನ್ನು ಮೈಸೂರು ಅರಸರು ಬೆಟ್ಟದ ತಾಯಿ ಚಾಮುಂಡೇಶ್ವರಿ ಎಂದು ಕರೆದು, ತಮ್ಮ ಕುಲದೇವತೆಯಾಗಿ ಪೂಜಿಸಿದರು ಎನ್ನುತ್ತದೆ ಇತಿಹಾಸ. ಅಂದಿನಿAದ ಮರ್ಬಳ ತೀರ್ಥಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಇತಿಹಾಸ ತಜ್ಞರು.
೧೬ ಅಡಿ ಎತ್ತರದ ಹೆಬ್ಬಂಡೆಯಲ್ಲಿ ಕೆತ್ತಲಾಗಿರುವ ನಂದಿಯ ಸುಂದರ ಮೂರ್ತಿ ಬೆಟ್ಟದ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ನಂದಿಯ ಮೂರ್ತಿಯಲ್ಲಿ ಗಂಟೆಸರ, ಗೆಜ್ಜೆಸರಗಳನ್ನು ಶಿಲ್ಪಿ ಸುಂದರವಾಗಿ ಕೆತ್ತಿದ್ದಾರೆ. ಬೆಟ್ಟದ ಮೇಲಿರುವ ಚಾಮುಂಡೇಶ್ವರಿಯ ಪುರಾತನ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಹಳೆಯ ದೇವಾಲಯವನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ನವೀಕರಿಸಿ ಇದರ ಮಹಾದ್ವಾರಕ್ಕೆ ಒಂದು ಸುಂದರವಾದ ಗೋಪುರವನ್ನು ಕಟ್ಟಿಸಿದ್ದಾರೆ. ದೇವಾಲಯ ಇವರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿತು.
ದ್ರಾವಿಡ ಶೈಲಿಯ ದೇವಾಲಯಗಳಂತೆ ಈ ದೇವಾಲಯದಲ್ಲೂ ಸುಕನಾಸಿ ಮತ್ತು ನವರಂಗಗಳಿವೆ. ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನ, ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳನ್ನು ರಾಜಮನೆತವರು ದೇವಿಗೆ ಸಮರ್ಪಿಸಿದ್ದಾರೆ.
ಪ್ರತಿವರ್ಷ ಆಶ್ವೀಜ ಶುದ್ಧ ಹುಣ್ಣಿಮೆಯಂದು ಚಾಮುಂಡೇಶ್ವರಿ ರಥೋತ್ಸವ ಜರುಗುತ್ತದೆ. ರಥೋತ್ಸವದ ಎರಡು ದಿನಗಳ ಬಳಿಕ ರಾತ್ರಿ ದೇವಾಲಯದ ಸಮೀಪದಲ್ಲೇ ಇರುವ ಕೊಳದಲ್ಲಿ ನಡೆಯುವ ತೆಪ್ಪೋತ್ಸವ ನೋಡಲು ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ.
Image Credits : Pinterest
ಅತ್ಯಂತ ಸುಂದರವಾಗಿದೆ ದೇವಿಯ ವಿಗ್ರಹ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡಿಯ ವಿಗ್ರಹ ಭಕ್ತರನ್ನು ಮರಳು ಮಾಡುವಂತೆ ಸುಂದರವಾಗಿದೆ. ವಿಗ್ರಹವು ಅತಿ ದೊಡ್ಡದಾಗಿರದಿದ್ದರೂ ಅದನ್ನು ಉಜ್ವಲವಾಗಿ ತೋರಿಸಲಾಗಿದೆ. ಶ್ರೀ ಕೃಷ್ಣರಾಜ ಒಡೆಯರ್ರ `ಶ್ರೀ ತತ್ವಾನಿಧಿ'ಯಲ್ಲಿ ಚಾಮುಂಡಿಯನ್ನು ಚಿನ್ನದ ಬಣ್ಣ (ಹೇಮಾಂಬ), ಮೂರು ಕಣ್ಣುಗಳ (ತ್ರೀನೇತ್ರ), ಯೌವ್ವನ (ನತಾವ್ವನಾಸ್ತ), ತೆಳು ಸೊಂಟ (ಕೃಷ ಮಧ್ಯ), ವಿಶಾಲ ಕಣ್ಣುಗಳು (ವಿಶಾಲಾಕ್ಷಿ) ಮತ್ತು ಸುಂದರ ಕುತ್ತಿಗೆ (ಸುಗ್ರೀವ)ಗಳಿಂದ ವರ್ಣಿಸಲಾಗಿದೆ.
ದೇವತೆಯು ಅಷ್ಟ ಭುಜಗಳಿಂದ ಕೂಡಿದ್ದು, ಅವಳ ಮೇಲಿನ ಬಲಗೈ ಮತ್ತು ಕೆಳಗಿನ ಎಡಗೈಯಲ್ಲಿ ತ್ರಿಶೂಲವಿದ್ದು, ಅದು ರಾಕ್ಷಸರ ಎದೆಯನ್ನು ಸೀಳುವಂತಿದೆ. ದೇವಿಯ ಉಳಿದ ಕೈಗಳಲ್ಲಿ ಖಡ್ಗ, ಬಾಣ, ವಜ್ರ, ಚಾಕು, ಈಟಿ, ಶಂಖ ಮತ್ತು ಸರ್ಪವಿದೆ. ಕೂತಿರುವ ದೇವತೆಯು ಹೊಯ್ಸಳರ ಕಲೆಯನ್ನು ನೆನಪಿಸುತ್ತದೆ. ಬೆಳ್ಳಿ ಮಂಟಪದಲ್ಲಿ ದೇವಿಯ ಹಲವಾರು ಅವತಾರಗಳಿವೆ. ಉತ್ಸವ ಮೂರ್ತಿಯಲ್ಲೂ ಇದೇ ಸಮನಾದ ಲಕ್ಷಣಗಳಿವೆ.
ಚಾಮುಂಡೇಶ್ವರಿ ಹಿಂದೂ ಧರ್ಮದಲ್ಲಿ, ಚಾಮುಂಡಿ ಎಂದೂ ಪರಿಚಿತವಾಗಿರುವ ಹಿಂದೂ ದೇವಿಮಾತೆಯಾದ ದೇವಿಯ ಭಯಾನಕ ರೂಪ ಮತ್ತು ಸಪ್ತ ಮಾತೃಕೆಯರ ಪೈಕಿ ಒಬ್ಬಳು. ಅವಳು ಯೋಧೆ ದುರ್ಗಾ ದೇವಿಯ ಪರಿಚಾರಕಿಯರಾದ ಅರವತ್ತು ನಾಲ್ಕು ಅಥವಾ ಎಂಬತ್ತೊAದು ತಾಂತ್ರಿಕ ದೇವತೆಗಳಾದ, ಮುಖ್ಯ ಯೋಗಿನಿಗಳ ಪೈಕಿ ಕೂಡ ಒಬ್ಬಳು. ಈ ಹೆಸರು ಚಾಮುಂಡಿಯು ಕೊಂದ ಇಬ್ಬರು ಅಸುರರಾದ ಚಂಡ ಮತ್ತು ಮುಂಡರ ಸಂಯೋಗವಾಗಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನು ಫಾಲೋ ಮಾಡಿ
► Subscribe to Planet Tv Kannada
https://www.youtube.com/Planet Tv Kannada
► Follow us on Facebook
https://www.facebook.com/Planettvkannada
► Follow us on Twitter
https://twitter.com/Planettvkannada
► Follow us on Instagram
https://www.instagram.com/planettvkannada
► Follow us on Pinterest
https://www.pinterest.com/Planettvkannada
► Follow us on Koo app
https://www.kooapp.com/planettvkannada
► Follow us on share chat
https://sharechat.com/planettvkannada
► Join us on Telegram
https://t.me/planettvkannada
► Follow us on Tumblr
https://www.tumblr.com/planet-tv-kannada
from ಸುದ್ದಿ - Planet Tv https://ift.tt/3bJF10g
May 22, 2021 at 08:38PM