ಉಜ್ಜಯನಿಯಲ್ಲಿದೆ ಮಹಾಕಾಳೇಶ್ವರ ಜ್ಯೋತಿರ್ಲಿಂಗ..
ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮೂರನೇಯ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಉಜ್ಜಯನಿ ನಗರದಲ್ಲಿದೆ. ಸಾಮಾನ್ಯವಾಗಿ ಲಿಂಗಗಳಾಗಿರಬಹುದು ಅಥವಾ ದೇವಾಲಯಗಳಾಗಿರಬಹುದು ಭೂಮಿಯ ಮೇಲ್ಮೈಗಿಂತ ಎತ್ತರದಲ್ಲಿರುತ್ತದೆ. ಆದರೆ ಮಹಾಕಾಳೇಶ್ವರ ದೇವಾಲಯದ ಜ್ಯೋತಿಲಿರ್ಂಗವು ಭೂಮಿಯ ಮೇಲ್ಮೈಗಿಂತ ಕೆಳಗಿದ್ದು, ದಕ್ಷಿಣ ದಿಕ್ಕಿನಲ್ಲಿದೆ.
ಮಹಾಕಾಳೇಶ್ವರನಿಗೆ ಭಸ್ಮರಾತಿ: ಪ್ರತಿದಿನ ಬೆಳಗ್ಗೆ 4 ಗಂಟೆಗೆ ಮಹಾಕಾಳೇಶ್ವರನಿಗೆ ಆರತಿ ಮಾಡಲಾಗುತ್ತದೆ. ಈ ರೀತಿಯ ಆಚರಣೆ ಇರುವುದು ಇಲ್ಲಿ ಮಾತ್ರ. ಇಲ್ಲಿನ ಶಿವಲಿಂಗಕ್ಕೆ ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಸುಟ್ಟು ಅದರ ಭಸ್ಮವನ್ನು ಆರತಿ ಬೆಳಗಿ ಶಿವನಿಗೆ ಅರ್ಪಿಸಲಾಗುತ್ತದೆ. ಇದನ್ನು ಭಸ್ಮಾರತಿಯೆಂದು ಕರೆಯಲಾಗುತ್ತದೆ. ಇಲ್ಲಿನ ಶಿವಲಿಂಗಕ್ಕೆ ಭಸ್ಮಾರತಿ ಮಾತ್ರವಲ್ಲದೇ, ನೈವೇದ್ಯ ಆರತಿ, ಅಭ್ಯಂಗ ಶೃಂಗಾರ, ಸಂಜೆ ಹಾಗೂ ರಾತ್ರಿ ಆರತಿ ಮಾಡಲಾಗುತ್ತದೆ. ನಿತ್ಯ 5 ಬಾರಿ ಮಹಾಕಾಳೇಶ್ವರನಿಗೆ ಆರತಿ ಮಾಡಲಾಗುತ್ತದೆ.
ಮಂದಿರದ ಒಳಗಡೆ ಅನೇಕ ದೇವ ದೇವಿಯರ ಮೂರ್ತಿಗಳಿವೆ .ದುರ್ಗೆ, ಅನ್ನಪೂರ್ಣೇಶ್ವರಿ, ಗಣಪತಿ, ಕಾರ್ತಿಕೇಯ ಮೊದಲಾದವು. ಮಂದಿರದ ಒಳಗಡೆ ಸ್ವಲ್ಪ ದೂರ ನಡೆದು ಸಣ್ಣ ಮೆಟ್ಟಿಲುಗಳನ್ನು ಇಳಿದರೆ ಗರ್ಭಗುಡಿ ಸಿಗಲಿದೆ. ಗರ್ಭಗುಡಿ ಬಹಳ ಚಿಕ್ಕದಾಗಿದೆ. ಶ್ರೀ ಮಹಾಕಾಳೇಶ್ವರ ಜ್ಯೋತಿಲಿರ್ಂಗವು ಸಹಾ ಚಿಕ್ಕದಾಗಿದೆ.
ಭಕ್ತರು ಇಲ್ಲಿ ಗರ್ಭಗುಡಿಯೊಳಗೆ ಹೋಗಿ ಸ್ವತಃ ಅಭಿಷೇಕ ಮಾಡಿ ಪೂಜೆ ಮಾಡಬಹುದು. ಶಿವಲಿಂಗವನ್ನು ಸ್ಪರ್ಶಿಸಿ ಪುಣ್ಯ, ಮನಸ್ಸಂತೋಷವನ್ನು ಪಡೆಯಬಹುದು.
ಮತ್ತೊಂದು ಬಹಳ ವಿಶೇಷವಾದ ಸಂಗತಿ ಎಂದರೆ ಇಲ್ಲಿ ದೇವರಿಗೆ ಅರ್ಪಿಸಿದ ಹೂವು, ಪ್ರಸಾದಗಳನ್ನು ಮರು ಬಳಕೆ ಮಾಡಬಹುದು. ಇದು ಭಾರತದ ಇತರ ದೇವಾಲಯಗಳಲ್ಲಿ ಕಂಡುಬಾರದ ವಿಶೇಷ ಆಚರಣೆ ಎನಿಸಿದೆ.
ಶಿವರಾತ್ರಿಯಂದು ಇಲ್ಲಿ ಬಹಳ ವಿಶೇಷವಾದ ಪೂಜೆ ನಡೆಯುತ್ತದೆ. ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ಮಹಾಕಾಳೇಶ್ವರ ದರ್ಶನ ಪಡೆದು ಪುನೀತರಾಗುತ್ತಾರೆ.
ಈ ದೇವಾಲಯದಲ್ಲಿ ಒಟ್ಟು ಮೂರು ಶಿವಲಿಂಗಗಳು ಇವೆ. ಮಹಾಕಾಳೇಶ್ವರ, ಓಂಕಾರೇಶ್ವರ ಮತ್ತು ನಾಗಚಂದ್ರೇಶ್ವರ. ನಾಗಚಂದ್ರೇಶ್ವರ ದೇವಾಲಯವನ್ನು ಕೇವಲ ನಾಗಪಂಚಮಿ ದಿನದಂದು ಮಾತ್ರ ತೆರೆಯಲಾಗುತ್ತದೆ.
ಮಗುವಿನಿಂದ ನಿರ್ಮಾಣವಾದ ದೇವಾಲಯ: ಮಹಾಕಾಳೇಶ್ವರ ದೇವಾಲಯವನ್ನು ಯಾವಾಗ ನಿರ್ಮಿಸಲಾಯಿತು ಎನ್ನುವ ಬಗ್ಗೆ ಯಾರಿಗೂ ಅಧಿಕೃತ ಮಾಹಿತಿ ಇಲ್ಲ. ಆದರೆ ದೇವಾಲಯ ಸೃಷ್ಟಿಯಾಗಿದ್ದರ ಕುರಿತು ಬಹಳ ರೋಚಕವಾದ ಕಥೆಯೊಂದು ಪುರಾಣದಲ್ಲಿದೆ.
ಪುರಾಣಗಳ ಪ್ರಕಾರ, ಉಜ್ಜಯನಿ ನಗರವನ್ನು ಅವಂತಿಕಾ ಎಂದು ಕರೆಯಲಾಗುತ್ತಿತ್ತು. ಪುರಾಣಗಳಲ್ಲಿ ಅವಂತಿಕಾವು ಭಕ್ತಿ ಮತ್ತು ಸುಂದರತೆಗೆ ಹೆಸರುವಾಸಿಯಾಗಿತ್ತು. ಹಾಗೂ ಇಲ್ಲಿ ಚಂದ್ರಸೇನನೆಂಬ ಶಿವನ ಧರ್ಮನಿಷ್ಠ ಭಕ್ತ ಆಳ್ವಿಕೆಯನ್ನು ನಡೆಸುತ್ತಿದ್ದನು.
ಚಂದ್ರಸೇನನಿಗೆ ಮಣಿಭದ್ರ ಎನ್ನುವ ಸ್ನೇಹಿತನಿದ್ದನು. ಒಮ್ಮೆ ಮಣಿಭದ್ರನು ತನ್ನ ಸ್ನೇಹದ ಪ್ರತೀಕವಾಗಿ ಚಂದ್ರಸೇನನಿಗೆ ಚಿಂತಾಮಣಿ ಎನ್ನುವ ಪವಿತ್ರ ಮಣಿಯನ್ನು ನೀಡಿದನು. ರಾಜ ಚಂದ್ರಸೇನನು ತನ್ನ ಸ್ನೇಹಿತ ಕೊಟ್ಟ ಉಡುಗೊರೆಯೆಂದು ಕುತ್ತಿಗೆಗೆ ಹಾಕಿಕೊಳ್ಳುತ್ತಾನೆ.
ಚಂದ್ರಸೇನನು ಆ ಮಣಿಯನ್ನು ಧರಿಸುತ್ತಿದ್ದಂತೆ ಆತನ ಅರಮನೆಯು ಪ್ರಕಾಶಮಾನವಾಗಿ ಹೊಳೆಯಲಾರಂಬಿಸಿತು ಮತ್ತು ಆತನ ಖ್ಯಾತಿಯೂ ಹೆಚ್ಚಾಗ ತೊಡಗಿತು.
ರಾಜನ ಹೆಚ್ಚುತ್ತಿರುವ ಖ್ಯಾತಿಯನ್ನು, ಆ ಮಣಿಯ ಮಹತ್ವವನ್ನು ಅರಿತ ಇತರೆ ರಾಜರು ಹೇಗಾದರು ಮಾಡಿ ಆ ಮಣಿಯನ್ನು ತಮ್ಮದಾಗಿಸಿಕೊಳ್ಳಬೇಕೆಂದು ಪ್ರಯತ್ನಿಸಿದರು. ಆದರೆ ಚಂದ್ರಸೇನನಿಗೆ ಆ ಮಣಿ ಅತ್ಯಂತ ಪ್ರಿಯವಾಗಿದ್ದರಿಂದ ಅವನು ಅದನ್ನು ಯಾರಿಗೂ ನೀಡಲು ಮುಂದಾಗಲಿಲ್ಲ.
ಇದರಿಂದ ಕೋಪಗೊಂಡ ಇತರೆ ರಾಜರುಗಳು ಅವನಿಂದ ಆ ಮಣಿಯನ್ನು ಕಿತ್ತುಕೊಳ್ಳಲು ಒಬ್ಬರಾದಂತೆ ಒಬ್ಬರು ಯುದ್ಧವನ್ನು ಸಾರುತ್ತಾರೆ. ಇದರಿಂದ ಬೇಸರಗೊಂಡ ರಾಜ ಚಂದ್ರಸೇನನು ಮಣಿಯನ್ನು ಉಳಿಸಿಕೊಳ್ಳಲು ಭಗವಾನ್ ಮಹಾಕಾಳನ ಆಶ್ರಯದಲ್ಲಿ ಧ್ಯಾನ ಆರಂಭಿಸುತ್ತಾನೆ.
ರಾಜ ಚಂದ್ರಸೇನನು ಶಿವನ ಗಾಢವಾದ ಧ್ಯಾನದಲ್ಲಿದ್ದಾಗ ಗೋಪಿ ಎಂಬಾಕೆ ತನ್ನ 5 ವರ್ಷದ ಪುಟ್ಟ ಕಂದನನ್ನು ಕರೆದುಕೊಂಡು ದರ್ಶನಕ್ಕೆಂದು ಬರುತ್ತಾಳೆ. ಗೋಪಿ ವಿಧವೆಯಾಗಿದ್ದಳು. ಆದ್ದರಿಂದ ಅವಳೇ ತನ್ನ ಮಗುವನ್ನು ಸಾಕುತ್ತಿದ್ದಳು. ಅಲ್ಲಿ ಗೋಪಿಯ ಮಗ ಚಂದ್ರಸೇನನ ಧ್ಯಾನವನ್ನು ಕಂಡು ಪ್ರಭಾವಿತನಾಗುತ್ತಾನೆ. ಅಲ್ಲಿಂದ ಮನೆಗೆ ಹೋದಮೇಲೆ ಎಲ್ಲಿಂದಲೋ ಒಂದು ಕಲ್ಲನ್ನು ಮನೆಗೆ ತಂದು ಭಕ್ತಿಯಿಂದ ಅದನ್ನು ಶಿವಲಿಂಗವೆಂದು ಪೂಜಿಸುತ್ತಾನೆ.
ಆ ಕಲ್ಲನ್ನು ಪೂಜಿಸುವುದರಲ್ಲಿ ಗೋಪಿಯ ಮಗ ತನ್ನನ್ನು ತಾನು ಮರೆತಿದ್ದನು. ತಾಯಿ ಎಷ್ಟೇ ಕೂಗಿದರು ಕೂಡ ಅವನು ಕೇಳಿಸಿಕೊಳ್ಳುವುದಿಲ್ಲ. ಮಗು ಬರದ ಕಾರಣ ಗೋಪಿ ಕೋಪ ಮಾಡಿಕೊಂಡು ಮಗುವನ್ನು ಹೊಡೆಯಲು ಆರಂಭಿಸುತ್ತಾಳೆ. ಹಾಗೂ ಅ ಮಗು ಪೂಜೆಗೆ ತಂದಿದ್ದ ಎಲ್ಲಾ ವಸ್ತುಗಳನ್ನು ಹೊರಗೆ ಎಸೆಯುತ್ತಾಳೆ.
ಮಗು ಧ್ಯಾನದಿಂದ ಮುಕ್ತನಾದಾಗ ತನ್ನ ಧ್ಯಾನ ನಾಶವಾಯಿತೆಂದು ದುಃಖ ಪಡುತ್ತಾನೆ. ಇದ್ದಕ್ಕಿದ್ದಂತೆ ಅಲ್ಲೊಂದು ಆಶ್ಚರ್ಯಕರ ಸಂಗತಿ ನಡೆಯಿತು. ಶಿವನ ಕೃಪೆಯಿಂದ ಅಲ್ಲಿ ಸುಂದರವಾದ ದೇವಾಲಯವೊಂದು ನಿರ್ಮಾಣವಾಯಿತು.
ದೇವಾಲಯದ ಮಧ್ಯಭಾಗದಲ್ಲಿ ದೈವಿಕ ಶಕ್ತಿಯ ಶಿವಲಿಂಗವೊಂದು ಉದ್ಭವವಾಯಿತು. ಮಗು ಲಿಂಗವನ್ನು ನೋಡುತ್ತಿದ್ದಂತೆ ಅದನ್ನು ಪೂಜಿಸಲು ಆರಂಭಿಸಿತು. ಇದೆಲ್ಲವನ್ನು ಕಂಡು ತಾಯಿ ಗೋಪಿ ಆಶ್ಚರ್ಯಚಕಿತಳಾದಳು.
ರಾಜ ಚಂದ್ರಸೇನನು ಈ ಘಟನೆಯ ಬಗ್ಗೆ ತಿಳಿದಾಗ ಅವನು ಆ ಶಿವಭಕ್ತ ಮಗುವನ್ನು ಭೇಟಿಯಾಗಲು ಹೋದನು. ರಾಜ ಚಂದ್ರಸೇನನ ಜೊತೆ ಇತರ ರಾಜರು ಕೂಡ ಮಗುವನ್ನು ನೋಡಲು ಸಿದ್ಧರಾದರು. ಎಲ್ಲಾ ರಾಜರು ಚಂದ್ರಸೇನನ ಬಳಿ ಕ್ಷಮೆಯನ್ನು ಯಾಚಿಸಿದರು ಹಾಗೂ ಎಲ್ಲಾ ರಾಜರು ಸೇರಿಕೊಂಡು ಮಹಾಕಾಳನನ್ನು ಪೂಜಿಸಲು ಆರಂಭಿಸಿದರು ಎಂದು ಪುರಣಾದಲ್ಲಿದೆ.
ಪುರಾತನ ನಗರ ಉಜ್ಜಯಿನಿ: ಉಜ್ಜಯನಿ ನಗರದ ವೈಭವವನ್ನು ಪುರಾಣಗಳಲ್ಲಿ ಮತ್ತು ಮಹಾಭಾರತದಲ್ಲೂ ಉಲ್ಲೇಖಿಸಲಾಗಿದೆ. ಶ್ರೀಕೃಷ್ಣ ಮತ್ತು ಆತನ ಸಹೋದರ ಬಲರಾಮರು ಇಲ್ಲಿನ ಸಂದೀಪನಿ ಆಶ್ರಮದಲ್ಲಿ ಅಧ್ಯಯನ ಮಾಡಿದರು ಎನ್ನಲಾಗುತ್ತದೆ.
ಗುರು ಸಿಂಹ ರಾಶಿಯನ್ನು ಪ್ರವೇಶಿಸಿದಾಗ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ಪ್ರಸಿದ್ಧ ಕುಂಭಮೇಳವನ್ನು ಹಮ್ಮಿಕೊಳ್ಳಲಾಗುತ್ತದೆ. ಇದನ್ನು ಸಿಂಹಸ್ಥಮೇಳವೆಂದೂ ಕರೆಯಲಾಗುತ್ತದೆ. ಸಲೀಲ ಕ್ಷಿಪ್ರ ನದಿ ಕೂಡ ಇದೇ ಸ್ಥಳದಲ್ಲಿದೆ. ಈ ನದಿಯನ್ನು ಗಂಗೆಯಷ್ಟೇ ಪವಿತ್ರ ನದಿಯೆಂದು ಹೇಳಲಾಗುತ್ತದೆ.
ಭಾರತದಲ್ಲಿ ಕೇವಲ ನಾಲ್ಕು ನಗರಗಳಲ್ಲಿ ಮಾತ್ರ ಕುಂಭಮೇಳ ನಡೆಯುತ್ತದೆ. ಪ್ರಯಾಗ, ಹರಿದ್ವಾರ ನಾಸಿಕ್ ಹಾಗೂ ಮತ್ತೊಂದು ನಗರವೇ ಉಜ್ಜಯಿನಿ...
ಕುಂಭಮೇಳದ ಸಮಯದಲ್ಲಿ ಇಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಇಲ್ಲಿನ ಕ್ಷಿಪ್ರಾನದಿಯಲ್ಲಿ ಸ್ನಾನ ಮಾಡಿ ತರ್ಪಣ ಕೊಡುತ್ತಾರೆ. ಸಮುದ್ರ ಮಥನ ಕಾಲದಲ್ಲಿ ಹುಟ್ಟಿದ ಅಮೃತದ ಬಿಂದುಗಳು ಈ ನಾಲ್ಕು ಸ್ಥಳಗಳಲ್ಲಿ ಬಿದ್ದುದರಿಂದ ಪರ್ವಕಾಲದಲ್ಲಿ ಈ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮುಕ್ತಿ ದೊರಕುವುದೆಂದು ಹೇಳುತ್ತಾರೆ.
ಕವಿರತ್ನ ಕಾಳಿದಾಸ ಇದ್ದ ನಗರವಿದು: ಇನ್ನು ವಿಕ್ರಮ-ಬೇತಾಳನ ಕಥೆ ನಿಮಗೆಲ್ಲಾ ಗೊತ್ತೇ ಇರುತ್ತದೆ. ಈ ಕಥೆಯಲ್ಲಿ ಬರುವ ವಿಕ್ರಮಾದಿತ್ಯ ರಾಜನು ಉಜ್ಜಯಿನಿಯನ್ನು ಆಳುತ್ತಿದ್ದನ್ನು ಎಂದು ಇತಿಹಾಸ ನಮಗೆ ತಿಳಿಸುತ್ತದೆ. ಕವಿರತ್ನ ಕಾಳಿದಾಸನೂ ವಿಕ್ರಮಾದಿತ್ಯನ ಆಸ್ಥಾನಲ್ಲಿದ್ದನು ಎನ್ನುವುದನ್ನು ನೆನಪಿಸಿಕೊಳ್ಳಬಹುದು.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..
ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..
► Subscribe to Planet Tv Kannada: https://www.youtube.com/Planet Tv Kannada
► Follow us on Facebook: https://www.facebook.com/Planettvkannada
► Follow us on Twitter:- https://twitter.com/Planettvkannada
► Follow us on Instagram:- https://www.instagram.com/planettvkannada
► Follow us on Pinterest: https://www.pinterest.com/Planettvkannada
► Follow us on Koo app:- https://www.kooapp.com/planettvkannada
► Follow us on share chat:- https://sharechat.com/planettvkannada
► Join us on Telegram:- https://t.me/planettvkannada
► Follow us on Tumblr:- https://www.tumblr.com/planet-tv-kannada
► Follow us on Reddit https://www.reddit.com/Planet-tv-kannada