ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳಿಗೆ ಚೂರಿ ಇರಿತ
ಹೊಸದಿಲ್ಲಿ: ನಾಲ್ಕು ಮಂದಿ ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಶಾಲಾ ಆವರಣದ ಹೊರಗೆ ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಪೂರ್ವ ದೆಹಲಿಯಲ್ಲಿ ಶನಿವಾರ ನಡೆದಿದ್ದು, ವಿದ್ಯಾರ್ಥಿ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
ಪೂರ್ವ ದೆಹಲಿಯ ಮಯೂರ್ ವಿಹಾರ್ ಪ್ರದೇಶದ ಸರ್ವೋದಯ ಬಾಲ ವಿದ್ಯಾಲಯದಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬರೆದು ವಿದ್ಯಾರ್ಥಿಗಳು ಹೊರ ಬರುತ್ತಿದ್ದಂತೆಯೇ ಬೇರೆ ಶಾಲೆಯ ವಿದ್ಯಾರ್ಥಿಗಳ ಗುಂಪೊಂದು ನಾಲ್ವರು ವಿದ್ಯಾರ್ಥಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಗಾಯಗೊಳಿಸಿದೆ.
ಹತ್ತನೇ ತರಗತಿ ಪರೀಕ್ಷೆ ಬರೆದ ಬಹಳಷ್ಟು ಮಂದಿ ವಿದ್ಯಾರ್ಥಿಗಳು ಈ ಕ್ರೌರ್ಯಕ್ಕೆ ಮೂಕಪ್ರೇಕ್ಷಕರಾಗಬೇಕಾಯಿತು. ದಾಳಿಯಿಂದ ವಿದ್ಯಾರ್ಥಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಅಕ್ಕಪಕ್ಕದ ಪಾರ್ಕ್ ಗಳಿಗೆ ಚಲ್ಲಾಪಿಲ್ಲಿಯಾಗಿ ಓಡಿಹೋದರು. ಅವರನ್ನು ಓಡಿಸಿಕೊಂಡು ಹೋದ ದಾಳಿಕೋರರು ನಾಲ್ವರನ್ನು ಹಿಡಿದು ಇರಿದರು.
ಗಾಯಾಳುಗಳನ್ನು ಗೌತಮ್, ರೆಹಾನ್, ಫೈಜಾನ್ ಮತ್ತು ಆಯುಷ್ ಎಂದು ಗುರುತಿಸಲಾಗಿದ್ದು, ಇವರು ಸರ್ವೋದಯ ಬಾಲ ವಿದ್ಯಾಲಯ ಕೇಂದ್ರದಲ್ಲಿ ಪರೀಕ್ಷೆ ಬರೆದ ತ್ರಿಲೋಪುರಿ ಸರ್ಕಾರಿ ಬಾಲಕರ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು. ತಕ್ಷಣವೇ ಗಾಯಾಳು ವಿದ್ಯಾರ್ಥಿಗಳನ್ನು ಸಹ ವಿದ್ಯಾರ್ಥಿಗಳು ದೆಹಲಿಯ ಲಾಲ್ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ಕರೆತಂದರು. ಈ ವೇಳೆಗೆ ಗಾಯಾಳುಗಳಿಗೆ ಸಾಕಷ್ಟು ರಕ್ತಸ್ರಾವ ಆಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸರ್ಕಾರಿ ಶಾಲೆಯ ಎದುರು ಗಾಯಾಳು ಮಕ್ಕಳ ತಾಯಂದಿರ ಆಕ್ರಂದನ ಮುಗಿಲು ಮುಟ್ಟುತ್ತಿದ್ದಂತೇ ಪಾಂಡವನಗರ ಪೊಲೀಸರು ಸ್ಥಶಳಕ್ಕೆ ಆಗಮಿಸಿದರು. ಉದ್ಯಾನವನದ ಹಲವು ಕಡೆಗಳಲ್ಲಿ ರಕ್ತದ ಕುರುಹುಗಳು ಪೊಲೀಸರಿಗೆ ಕಂಡುಬಂದವು. ಗಾಯಗೊಂಡ ಎಲ್ಲರೂ 15-16 ವಯಸ್ಸಿನವರು.
from Planet Tv https://ift.tt/30lcefP
December 12, 2021 at 11:26AM