ಹಿಂದಿನ ಸೀಟ್
ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರಾಜಹಂಸ ಬಸ್. ಅಂದೇನೂ ಹೆಚ್ಚು ಜನರಿರಲಿಲ್ಲ. ಅಲ್ಲೊಂದು ಇಲ್ಲೊಂದು ಸೀಟ್ ಭರ್ತಿ ಆಗಿತ್ತು ಅಷ್ಟೇ. ನಾನು 'ನಿರಾತಂಕವಾಗಿ ಹೋಗಬಹುದು' ಅಂತ ಟೈರ್ ಮೇಲೆ ಇರದ ಸೀಟ್ ನೋಡಿಕೊಂಡು ಕುಳಿತೆ.
ಇಷ್ಟೊಂದು ಖಾಲಿ ಇರುವ ಬಸ್ ನನ್ನ ಪಕ್ಕ ಯಾರು ಕುಳಿತುಬಿಡುತ್ತಾರೆ ಅಂತ ಆತಂಕ ಇಲ್ಲ. ಬೆಳ್ಳಿಗಿನಿಂದ ಸೈಟ್ ವರ್ಕ್ ಮಾಡಿ ದಣಿದ ದೇಹ ಕುಳಿತು 5 ನಿಮಿಷದೊಳಗೆ ನಿದ್ದೆಗೆ ಜಾರಿದ್ದೆ.
ಮುಸಿಮುಸಿ ನಗುವ ಸದ್ದು.... ಬಳೆಗಳ ಕಿಣಿಕಿಣಿ. ಗೆಜ್ಜೆ ಸಹ ಆಗಾಗ ಹಿಮ್ಮೇಳ ನೀಡುತ್ತಿತ್ತು. 'ಘಮ್' ಅನ್ನೋ ಮಲ್ಲಿಗೆ ಹೂ ಮತ್ತು ನನ್ನಿಷ್ಟದ paries Hilton fruity perfume ಮೂಗಿಗೆ ಬಡೆಯುತ್ತಿದಂತೆ ನನ್ನ ನಿದ್ದೆ ಹಾರಿ ಹೋಯಿತು. ಹಿಂದಿನ ಸೀಟಿನಲ್ಲಿ ಯಾರೂ ನವವಿವಾಹಿತರಿರಬೇಕು. ಕಿಟಕಿಯಿಂದ ಆಚೆ ಗಮನಿಸಿದೆ. ಹಾಸನ ದಾಟಿ ಹೋಗುತ್ತಿದೆ ಬಸ್
ಮುದ್ದಿಸುವ ತುಸು ಗಡಸು ಅನ್ನಿಸೋ ಧ್ವನಿ, ಲಲ್ಲೆಗರೆವ, ಹುಸಿಮುನಿಸು ತೋರುವ ಇಂಪಾದ ಕೊರಳೊಂದು. ಬೇಡವೆಂದರೂ ಕಿವಿ ಅತ್ತ ಕಡೆಯೇ ವಾಲುತ್ತಿದೆ. ಛೇ.....ನಿದ್ದೆ ಯಾದರು ಬರಬಾರದ. ಇಷ್ಟೊತ್ತು ಮೈಮೇಲೆ ಎಚ್ಚರ ಇಲ್ಲದೆ ಮಲಗಿದ್ದವಳು ಈಗ ಕಣ್ಣು ಮುಚ್ಚಿದ್ದರು ನಿದ್ರೆಯ ಸುಳಿವಿಲ್ಲ.
ಇವರ್ಯಾಕೆ ನನ್ನ ಸೀಟಿನ ಹಿಂದೆ ಬಂದು ಕುಳಿತರೊ..?
ಮದ್ಯೆ ಸಕಲೇಶಪುರ ಹತ್ರ ಕಾಫಿ..ಮತ್ತು ಜಲಭಾಧೆ ತೀರಿಸಿಕೊಳ್ಳಲು ಬಸ್ ನಿಲ್ಲಿಸಿತು.
ಎದ್ದು ಸ್ವಲ್ಪ ಕೈಕಾಲು ಆಡಿಸಿ ಸಾಧ್ಯವಾದರೆ ಬೇರೆ ಸೀಟಿಗೆ ಸ್ಥಳಾಂತರ ಮಾಡೋಣ ಅಂತ ಎದ್ದು ನಡೆದೆ. ಮನಸ್ಸು ತಡೆಯಲಿಲ್ಲ ಒಮ್ಮೆ ನನ್ನ ಸೀಟಿನ ಹಿಂದೆ ಕುಳಿತು ಕೊಂಡ ಜೋಡಿಯನ್ನು ನೋಡೋಣ ಅಂತ ಕುತೂಹಲ. ತಿರುಗಿ ನೋಡಿದೆ.
ಸೀಟು ಖಾಲಿ!!!! ಯಾರು ಇಲ್ಲ. ನನ್ನ ಸೀಟ್....... ಮೂರುನಾಲ್ಕು ಹಿಂದಿನ ಸೀಟ್ವರೆಗೂ ಯಾರೂ ಇಲ್ಲ. ಅಂದರೆ ನಾನು ಕನಸು ಕಂಡೆನೆ? ಇಲ್ಲ ಚೆನ್ನಾಗಿ ನೆನಪಿದೆ ನಿದ್ದೆಯೇ ಬಂದಿಲ್ಲ.
ಎದೆ ಢವ ಗುಟ್ಟಿತು. ಯಾರನ್ನು ಕೇಳೋದು?. ಕೆಳಗೆ ಮಧ್ಯರಾತ್ರಿ ಇಳಿಯೋಕು ಭಯ. ಚಾಲಕನ ಸೀಟ್ ತನಕ ಹೋಗಿ ಮತ್ತೆ ಹಿಂದೆ ಬಂದೆ. ಸುತ್ತ ಕಣ್ಣಾಡಿಸಿದೆ. ಕೆಲವರು ಶಾಂತವಾಗಿ ನಿದ್ದೆ ಮಾಡ್ತಿದ್ದಾರೆ.ಕೆಲವು ಹುಡುಗರು ಇಳಿದು ಚಳಿಗೆ ಬುಸ್ ಅಂತ ಸಿಗರೇಟ್ ಹೊಗೆ ಬಿಡ್ತಿದ್ದಾರೆ. ಭ್ರಮೆ ಇರಬೇಕು ಇತ್ತೀಚೆಗೆ ಯಾವುದೇ ರೊಮ್ಯಾಂಟಿಕ್ ಸಿನಿಮಾ,ಕಾದಂಬರಿ ಓದಿಲ್ಲ? ಇರಲಿ ನೋಡೋಣ ಅಂತ ಮತ್ತೆ ನನ್ನ ಸೀಟಿನಲ್ಲಿ ಕುಳಿತೆ. ಬಸ್ ಹೊರಟಿತು. ಮುಂದೆ ಘಾಟ್ ಸೆಕ್ಷನ್. ಬಸ್ ತಿರುಗುವಾಗ ಮತ್ತೆ ಅದೇ ಬಳೆ, ಗೆಜ್ಜೆ ಸದ್ದು. ಕೊಸರಾಡುವ ದನಿ. ಬಹಳ ಹತ್ತಿರದಲ್ಲೇ ಕೇಳುತ್ತಿದೆ. ಒಮ್ಮೆ ನಾನೇ ನನ್ನ ಕೈ ಚಿವುಟಿಕೊಂಡುನೋಡಿದೆ. ಹಾ......ಉದ್ದನೆಯ ಉಗುರು ಚುಚ್ಚಿ ನೋವಾಯಿತು. ಎಚ್ಚರವಾಗೆ ಇದ್ದೀನಿ. ಹಿಂದೆ ತಿರುಗಿ ನೋಡಲು ಭಯ. ಚಳಿಯಲ್ಲುಯೂ ಮೈ ಬೆವರಿತು. ಚಾಲಕನೊಂದಿಗೆ ಹರಟೆಯಲ್ಲಿ ಮಗ್ನನಾದ ಕಂಡಕ್ಟರ್ ಕೂಗೋಣ ಅಂದ್ರೆ ಗಂಟಲಿನಿಂದ ಶಬ್ದವೇ ಹೊರಡುತ್ತಿಲ್ಲ. ಸೀಟಿನಿಂದ ಏಳೋಕ್ಕೂ ಆಗುತ್ತಿಲ್ಲ. ರಿಕ್ಲೈನರ್ ಬ್ಯಾಕ್ ಎದ್ದೇಳಲು ಬಿಡುತ್ತಿಲ್ಲ. 'ಅಯ್ಯೋ..ಮಹಾನ್ ದೈರ್ಯವಂತೆ ಅಂತ ಒಬ್ಬಳೇ ರಾತ್ರಿ ಬಸ್ ಹತ್ತಿ ಬರೋ ಸಹಾಸ ಏಕೆ ಮಾಡಿದೆ' ಅಂತ ನನ್ನನ್ನು ನಾನೇ ಶಪಿಸಿಕೊಂಡೆ. ಏನಾದರಾಗಲಿ ಹೊದ್ದುಕೊಂಡ ಶಾಲ್ ಮುಖದ ತುಂಬಾ ಎಳೆದುಕೊಂಡು ಕಿವಿ ಕೈಬೆರಳಿಂದ ಗಟ್ಟಿಯಾಗಿ ಅಮುಕಿ ಯಾವುದೇ ಶಬ್ದ ಕೇಳದಂತೆ ಹಿಡಿದುಕೊಂಡು ಕುಳಿತೆ.
" ರಾಮಸ್ಕಂದಮ್...ಹನುಮಂತಮ್" ಶ್ಲೋಕನೂ ಬಾಯಿಗೆ ಬರುತ್ತಿಲ್ಲ. ಕೈ ಕಿವಿ ಹತ್ರ ಸ್ವಲ್ಪ ಸಡಿಲ ಮಾಡಿದರೂ ಹೆಣ್ಣು ಗಂಡುಗಳ ಸರಸ ಸಲ್ಲಾಪದ ದನಿ.
ಬೆಳಗಿನ ಜಾವ ಸ್ವಲ್ಪ ನಿದ್ದೆ ಹತ್ತಿತು. "ಉಳ್ಳಾಲ ಯಾರ್ರೀ ಇದ್ದೀರಿ" ಕೂಗಿಗೆ ಎದ್ದೆ. "ಅಬ್ಬಾ ಇನ್ನೇನು ಇಳಿಯುವ ಜಾಗ ಬಂತು" ಸ್ವಲ್ಪ ಕಿವಿ ಹಿಂದಿನ ಸೀಟ್ ಕಡೆ ತಿರುಗಿಸಿದೆ. ಯಾವ ಶಬ್ದನೂ ಇಲ್ಲ. ಸ್ವಲ್ಪ ಧೈರ್ಯ ಬಂತು.
ಇಳಿಯುವ ಸ್ಥಳ ಬಂದೊಡನೆ ಎದ್ದು ನನ್ನ ಬ್ಯಾಗ್ ಹೆಗಲಿಗೇರಿಸಿ ಹಿಂದಿನ ಸೀಟ್ ಕಡೆ ಬಗ್ಗಿ ನೋಡಿದೆ. ಸೀಟ್ ತುಂಬಾ ಮಲ್ಲಿಗೆಯ ಹೂ ನಲುಗಿ ಬಿದ್ದಿದ್ದೆ. ಅಂದರೆ .....?
ಇಳಿಯುವಾಗ ಬಾಗಿಲ ಬಳಿ ನಿಂತಿದ್ದ ಕಂಡಕ್ಟರ್ ಕೇಳಿದೆ "ಹೊಸದಾಗಿ ಮದುವೆಯಾದ ಜೋಡಿಯೊಂದು ಈ ಬಸ್ನಲ್ಲಿ ಪ್ರಯಾಣ ಮಾಡಿದರೆ? "
"ಎಲ್ಲಿ ಮೇಡಂ.ಇವತ್ತು ಜಾಸ್ತಿ ಜನಾನೇ ಇಲ್ಲ ಖಾಲಿ ಖಾಲಿ ಬಸ್ಸು ನೋಡಿದ್ರಲ್ಲ. ಯಾಕೆ ಹಾಗೆ ಕೇಳಿದ್ರಿ?"
'ಹೇಳಲೂ ಬೇಡವೋ , ಕೇಳಿ ಅವರೆಲ್ಲಾ ಆಡಿಕೊಂಡು ನಕ್ಕುಬಿಟ್ಟರೆ' ಅನ್ನಿಸಿತು.
'ಏನಿಲ್ಲ ಬಿಡಿ' ಅಂದವಳು ಹಿಂದಿನ ಸೀಟ್ ಮೇಲಿದ್ದ ಮಲ್ಲಿಗೆ ಹೂ ನೆನಪಿಗೆ ಬಂತು. ಚಾಲಕ ಮತ್ತು ನಿರ್ವಾಹಕನನ್ನು ಒಳಗೆ ಕರೆದುಕೊಂಡು ಹೋಗಿ ತೋರಿಸಿದೆ. ರಾತ್ರಿಯ ಅನುಭವ ತಿಳಿಸಿದೆ. ಅವರೂ ಧಿಗ್ಭ್ರಅಂತರಾದರು.
ತಕ್ಷಣ ಆ ಚಾಲಕ ನಿನ್ನೇ ಹಾಸನ ಹತ್ತಿರ ನಡೆದ ಅಪಘಾತದ ಬಗ್ಗೆ ಹೇಳಿದ.
ದೊಡ್ಡಬಳ್ಳಾಪುರದ ಹುಡುಗಿ ಮಂಗಳೂರು ಹುಡುಗ 5 ವರ್ಷಗಳ ಪ್ರೀತಿ ಇಬ್ಬರ ಮನೆಯವರೂ ಒಪ್ಪದ ಕಾರಣ ಕಾದು,ಕಾದು ಕೊನೆಗೂ ಇಬ್ಬರ ಪೋಷಕರನ್ನು ಒಪ್ಪಿಸಿ ಮದುವೆ ಅದರಂತೆ. ನೆನ್ನೆ ಮದುವೆ ಮುಗಿಸಿಕೊಂಡು ಮಂಗಳೂರಿನತ್ತ ಹೋರಟ ಕಾರು ಹಾಸನ ದಾಟುತ್ತಿದ್ದಂತೆ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದು,ನವ ದಂಪತಿಗಳಿಬ್ಬರು ಸ್ಥಳದಲ್ಲೇ ಮೃತಹೊಂದಿದರಂತೆ. ಆಶ್ಚರ್ಯವೆಂಬಂತೆ ಪೋಷಕರಿಗೆ ಒಂದಷ್ಟು ತರಚಿದ ಗಾಯವಷ್ಟೇ. 5 ವರ್ಷಗಳ ಪ್ರೇಮ ಮದುವೆಯೊಂದಿಗೆ ಸುಖಾಂತ್ಯ ಹೊಂದಿತೆಂದು ಸಂತೋಷದಿಂದ ಹಾರಡುತ್ತಿದ್ದ ಜೋಡಿಗಳು ದಾರುಣವಾಗಿ ಅಪಘಾತದಲ್ಲಿ ಮಡಿದರಂತೆ.
ಹಾಗಿದ್ದರೆ ನನ್ನ ಈ ಅನುಭವ ಅವರಿಬ್ಬರು ಹಾಸನದಿಂದ ನನ್ನ ಸೀಟ್ ಹಿಂದೆ ಕುಳಿತು ಮಂಗಳೂರಿಗೆ ತಲುಪಿದರೆ.!!!
Story Source and Credits
Mamatha Bhama
from Planet Tv https://ift.tt/3pZisfj
January 05, 2022 at 06:21AM